ಬೆಂಗೇರಿಯಲ್ಲಿ ಅಭಿವೃದ್ಧಿಗೆ ಮತ್ತೊಂದು ಹೆಜ್ಜೆ; UGD ಹಾಗೂ ಕಾಂಕ್ರೆಟ್ ರಸ್ತೆ ಕಾಮಗಾರಿಗೆ ಭೂಮಿಪೂಜೆ!
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಾರ್ಡ್ ನಂ. 42ರ ಬೆಂಗೇರಿ ಮುಲ್ಲಾ ಓಣಿ ಹಾಗೂ ದೇವಾಂಗಪೇಟೆ ಪ್ರದೇಶದಲ್ಲಿ ಕೈಗೆತ್ತಿಕೊಳ್ಳಲಾಗಿರುವ UGD (ಅಂಡರ್ ಗ್ರೌಂಡ್ ಡ್ರೈನೇಜ್) ಮತ್ತು ಕಾಂಕ್ರೆಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಮಹೇಶ್ ಅಣ್ಣಾ ಟೆಂಗಿನಕಾಯಿ, ಪಾಲಿಕೆ ಸದಸ್ಯ ಶ್ರೀ ಎಂ.ವೈ. ನರಗುಂದ ಹಾಗೂ ಸರ್ವಧರ್ಮ ಸಮಾಜ ಸೇವಕ ಡಾ. ರಮೇಶ್ ಮಹಾದೇವಪ್ಪನವರ ಅವರು ಭೂಮಿಪೂಜೆ ನೆರವೇರಿಸಿ ಕಾಮಗಾರಿಗೆ ಅಧಿಕೃತ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಬೆಂಗೇರಿ ಭಾಗದಲ್ಲಿ ಹಲವು ವರ್ಷಗಳಿಂದ ಉತ್ತಮ ರಸ್ತೆ ಹಾಗೂ ಸಮರ್ಪಕ ಒಳಚರಂಡಿ ವ್ಯವಸ್ಥೆಯ ಅಗತ್ಯವಿದ್ದು, ಇದೀಗ ಆರಂಭವಾಗಿರುವ ಈ ಅಭಿವೃದ್ಧಿ ಕಾಮಗಾರಿಯಿಂದ ಸ್ಥಳೀಯ ನಿವಾಸಿಗಳ ಬಹುಕಾಲದ ಬೇಡಿಕೆ ಈಡೇರುವಂತಾಗಿದೆ ಎಂದು ಹೇಳಿದರು.
ಕಾಮಗಾರಿ ಗುಣಮಟ್ಟದಿಂದ ಹಾಗೂ ನಿಗದಿತ ಅವಧಿಯೊಳಗೆ ಪೂರ್ಣಗೊಳ್ಳುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಭೂಮಿಪೂಜೆ ಕಾರ್ಯಕ್ರಮದಲ್ಲಿ ಕ್ಷೇತ್ರದ ಅಧ್ಯಕ್ಷ ರಾಜು ಕಾಳೆ, ಹಟೇಲಸಾಬ್ ಮುಲ್ಲಾ, ಕಲಂದರ್ ಮುಲ್ಲಾ, ಅಶೋಕ ವಾಲ್ಮೀಕಿ, ಮಾರುತಿ ಸುಳ್ಳದ, ಹಸನಸಾಬ್ ತಾಶೇವಾಲೆ, ಮೌಲಾಸಾಬ್ ಮುಲ್ಲಾ, ಈಶ್ವರಗೌಡ ಪಾಟೀಲ್, ಮಂಜು ಉಡುಪಿ, ಪಕೀರಪ್ಪ ಗುಲಗಂಜಿ, ಯೋನ್ಸ್ ದಂಡಯಲ್, ಚಮಣಸಾಬ್ ಮುಲ್ಲಾ, ಅಡಿವೆಪ್ಪ ಹೊಸಮನಿ, ಕಲ್ಲಪ್ಪ ಹೊಸಮನಿ, ರವಿ ಮಳಗಿ, ಭಾಷಾ ಮುಲ್ಲಾ ಸೇರಿದಂತೆ ಅನೇಕ ಗಣ್ಯರು, ಸ್ಥಳೀಯ ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಿ ಕಾಮಗಾರಿಗೆ ಶುಭ ಹಾರೈಸಿದರು.
ಈ ಅಭಿವೃದ್ಧಿ ಕಾಮಗಾರಿಯಿಂದ ಬೆಂಗೇರಿ ಮುಲ್ಲಾ ಓಣಿ ಹಾಗೂ ದೇವಾಂಗಪೇಟೆ ಪ್ರದೇಶದ ರಸ್ತೆ ಮತ್ತು ಒಳಚರಂಡಿ ವ್ಯವಸ್ಥೆ ಸುಧಾರಣೆಯಾಗಲಿದ್ದು, ಮಳೆಗಾಲದಲ್ಲಿ ಉಂಟಾಗುವ ನೀರು ನಿಲ್ಲುವ ಸಮಸ್ಯೆಗೆ ಪರಿಹಾರ ದೊರೆಯುವ ನಿರೀಕ್ಷೆಯಿದೆ. ಸ್ಥಳೀಯರು ಈ ಕಾಮಗಾರಿಗೆ ಸಂತಸ ವ್ಯಕ್ತಪಡಿಸಿ, ಶೀಘ್ರದಲ್ಲಿ ಪೂರ್ಣಗೊಳಿಸುವಂತೆ ಮನವಿ ಮಾಡಿದರು.
yallu